ಬೆಳ್ತಂಗಡಿ ತಾಲ್ಲೂಕಿನ ಚಾರ್ಮಾಡಿ ಗ್ರಾಮದ ಕತ್ತರಿಗುಡ್ಡೆ ಎಂಬಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಶಾಸನ ಪಡೆದುಕೊಳ್ಳುತ್ತಿರುವ ಬಡ ಕುಟುಂಬದ ಶ್ರೀಮತಿ ಲಲಿತ(61) ಎನ್ನುವವರ ಮನೆಯ ಮೇಲ್ಚಾವಣಿಯ ದುರಸ್ತಿ ಹಾಗೂ ಮನೆಯ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಶ್ರಮದಾನವನ್ನು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ನಡೆಸಿದರು.

ಹಳೆಯ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿರುವ ಲಲಿತ ಇವರು ಕಷ್ಠದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಇವರಿಗೆ ಮಾಶಾಸನ ನೀಡಲಾಗುತ್ತಿದೆ.
ಹಳೆಯ ಮನೆಯಲ್ಲಿ ವಾಸವಾಗಿರುವ ಇವರ ಮನೆಯು ಮಳೆಗಾಲವಾಗಿದ್ದರಿಂದ ಅಲ್ಲಲ್ಲಿ ನೀರು ಸೋರುತ್ತಿತ್ತು. ಮನೆಯಲ್ಲಿ ಒಬ್ಬರೇ ಇರುವ ಇವರಿಗೆ ಮನೆ ರಿಪೇರಿ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಕಣ್ಣಿನ ದೃಷ್ಠಿಯನ್ನು ಕಳೆದುಕೊಂಡಿರುವ ಇವರಿಗೆ ಮನೆಯ ಒಳಗೆ ಸ್ವಚ್ಚತೆ ಮಾಡಿಕೊಳ್ಳುವುದೂ ಕಷ್ಠಕರವಾಗಿತ್ತು. ಮನೆಯೊಳಗೆ ಅಲ್ಲಲ್ಲಿ ಕಟ್ಟಿಗೆ ತುಂಡುಗಳು, ಹರಿದ ಬಟ್ಟೆಬರೆಗಳು ಹರಡಿಕೊಂಡಿದ್ದವು. ಎಷ್ಟೋ ವರ್ಷಗಳ ಹಿಂದೆ ಕಿಡಕಿಗಳಲ್ಲಿ ಹಾಕಿದ್ದ ಬಟ್ಟೆಗಳು ಮನೆಯೊಳಗೆ ಬೆಳಕು ಸಂಚರಿಸಲು ತಡೆಯೊಡ್ಡುತ್ತಿದ್ದವು. ಜೋರಾದ ಮಳೆಯಿಂದ ಕಿಡಕಿಯೊಳಗೆ ಸಹ ನೀರು ಬರುತ್ತಿತ್ತು.

ಮನೆಯ ಪರಿಸರದಲ್ಲಿ ಅನಗತ್ಯ ಗಿಡಗಂಟಿಗಳು, ಪೊದೆಗಳು ಬೆಳೆದು ಹಾವು ಮತ್ತಿತರ ವಿಷಜಂತುಗಳು ಅಡಗಿದ್ದರೂ ಕಾಣುತ್ತಿರಲಿಲ್ಲ. ಅಪಾಯಕಾರಿಯಾಗಿರುವುದರಿಂದ ಮನೆಯ ಸುತ್ತಲೂ ಸ್ವಚ್ಚತೆ ಮಾಡಬೇಕಾಗಿತ್ತು.
ಇದನ್ನು ಅರಿತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಜ್ಞಾನವಿಕಾಸ ಸಮನ್ವಯಾಧಿಕಾರಿಯವರ ಸಲಹೆಯಂತೆ ಮನೆಯ ಸ್ವಚ್ಚತಾ ಶ್ರಮದಾನವನ್ನು ನಡೆಸಿದ್ದಾರೆ. ಮನೆಯ ಒಳಗೆ ಹಾಗೂ ಮನೆಯ ಹೊರಗೆ ಸ್ವಚ್ಚತೆಯನ್ನು ನಡೆಸಿ, ಒಡೆದು ಹೋದ ಶೀಟ್ ಗಳಲ್ಲಿ ನೀರು ನುಗ್ಗದಂತೆ ವ್ಯವಸ್ಥೆ ಮಾಡಿದ್ದಾರೆ. ಕಿಡಕಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಮಾಡಿ ಮಳೆಯ ನೀರು ಒಳಗೆ ಹೋಗದಂತೆ ಮಾಡಿದ್ದಾರೆ. ಮನೆ ಬಳಕೆಗೆ ಅಗತ್ಯವಿರುವ ನೀರು ಮನೆಯ ಒಳಗೇ ಬರುವಂತೆ ಮಾಡಲು ನಲ್ಲಿಯಿಂದ ಪೈಪ್ ಅಳವಡಿಸಿ ಅನುಕೂಲ ಮಾಡಿಕೊಟ್ಟಿದ್ದಾರೆ.

ಶ್ರಮದಾನದ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಗಣೇಶ್ ರವರು ಉಪಸ್ಥಿತರಿದ್ದು ಸ್ವಯಂಸೇವಕರಿಗೆ ಪ್ರೇರಣೆ ನೀಡಿದ್ದಾರೆ. ಸೇವಾ ಪ್ರತಿನಿಧಿಯಾದ ರೇವತಿ, ಸ್ಥಳೀಯರಾದ ಬೊಮ್ಮಣ್ಣಗೌಡ ನಮಗೆ ಸಹಕಾರ ನೀಡಿರುತ್ತಾರೆ,
ನೆರಿಯ ಎ ಘಟಕದ ಸಂಯೋಜಕರಾದ ಸುಮಿತ್ರಾ, ಘಟಕ ಪ್ರತಿನಿಧಿ ನಾಗೇಶ್ ಬಿ, ಸ್ವಯಂಸೇವಕರಾದ ಜತ್ತಪ್ಪ, ಧರ್ಮಪ್ಪ, ಸತೀಶ್, ಚಿದಂಬರ ಶ್ರಮದಾನದಲ್ಲಿ ಪಾಲ್ಗೊಂಡಿದ್ದಾರೆ. ಸ್ವಯಂಸೇವಕರ ಈ ಮಾನವೀಯ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ.